>>>>>ನಾವು ಅವರಂತಲ್ಲ<<<<<
ಕ್ಷಮಿಸಿ ಬಿಡು ತಾಯೇ
ನಾವು ಅವರಂತಲ್ಲ.
ಅವರಂತಿಲ್ಲದ್ದಕ್ಕೆ ಖೇದವೂ ನಮಗಿಲ್ಲ...
ನಾವು ಕದನಪ್ರಿಯರಲ್ಲ
ಯುದ್ಧ ನಮಗೆ ಬೇಕಿಲ್ಲ
ನಮಗದು ಬರುವುದಿಲ್ಲ
ಕಲಿಯಲು ಯಳ್ಳಷ್ಟೂ ಇಷ್ಟವಿಲ್ಲ
ಜಾತಿ ಧರ್ಮ ಪ್ರೇಮ ಕಾಮ ಭ್ರಷ್ಟತೆಯ ನೆಪವೊಡ್ಡಿ
ಎಲ್ಲೆಡೆಯೂ ಸೇನೆಯ ಜಮೆಗೊಳಿಸಿ
ಸದಾ ಯುದ್ಧ ಯುದ್ಧ ಯುದ್ಧವೆಂದು
ಅವರನಿವರು ಬಡಿದು
ಇವರನವರು ತರಿದು
ಗೆದ್ದವರ ತಿಮಿರಿನುನ್ಮಾದ
ಅದು ನಮಗೆ ನಿಷೇಧ..
ಅಸ್ತ್ರಕೆ ಪ್ರತ್ಯಸ್ತ್ರ
ಒಳಗೆ ಬರೀ ಕುತಂತ್ರ
ನೂರಾರು ದುರಾಲೋಚನೆಗಳ ಷಡ್ಯoತ್ರ
ಕದನ ನಮಗಿಷ್ಟವಿಲ್ಲ
ಪ್ರತಿಷ್ಠೆ ಪರಾಕಾಷ್ಟೆ ಹೆಚ್ಚಿಸಿ
ಯಾರ್ಯಾರನ್ನೋ ಅಚ್ಚಿಸಿ ಮೆಚ್ಚಿಸಿ
ಕಿರೀಟ ಪಡೆವ
ಆಲೋಚನೆ ಅವರಿಗೇ ಇರಲಿ ತಾಯೆ
ನಮಗೆ ಬೇಕಿಲ್ಲ
ನಮಗೆ ನಮ್ಮದೇ ನೋವಿದೆ
ಮುಖಂಡರನ್ನೆಲ್ಲಾ ಸೃಷ್ಟಿಸಿ
ಮುಂದೂಕಿ, ಮೇಲಕ್ಕೆತ್ತಿದ ನಾವಿಂದು
ನಮ್ಮಷ್ಟಕ್ಕೆ ಅಲ್ಪಸಂಖ್ಯಾತರು
ನಮ್ಮೊಡಲ ನೋವು ನಮ್ಮೊಳಗೇ ಇರಲಿ ಬಿಡು
ಹೌದು, ನಾವು ಅವರಂತಲ್ಲ
ಯುದ್ಧ ಮಾಡದೇ ವಿಜಯ ದೊರಕುವುದಿಲ್ಲ
ಹೋಗಲಿ ಬಿಡು ತಾಯೇ ಕತ್ತೆ ಬಾಲ
ಅವರ ಸ್ವಾರ್ಥದ ತಕ್ಕಡಿಯೆಡೆ ನಾವು ದೃಷ್ಠಿಸುವುದೂ ಇಲ್ಲ
ನಮ್ಮ ಬಾಳಿಗೆ ದೃಷ್ಠಿಯೇ ಇಲ್ಲ
ದೂರದೃಷ್ಠಿ ಅಲ್ಲಿರಲಿ
ವಾಸ್ತವದ ಗೊಡವೆಯೇ ನಮಗಿಲ್ಲ
ಕ್ಷಮಿಸಿ ಬಿಡು ತಾಯೇ
ನಾವು ಅವರಂತಲ್ಲವೇ ಅಲ್ಲ
ನಾವು ಹೀಗೆಯೇ ನೋವು ಹಾಡುತ್ತೇವೆ
ಒಳಗಣ ಶತ್ರುಗಳ, ನೇತಾರರ ಕುಟಿಲತೆಯ
ಸಹಿಸಿ ಜೇವoತವಿರುತ್ತೆವೆ
ಚರಿತ್ರೆಯಾಗದೆಯೂ ಸತ್ತಂತೆಯೇ
ವರ್ತಮಾನದಲ್ಲಿರುತ್ತೇವೆ
-ಚೇತನ್ ಪ್ರಿಯಾ ಗುಣಸಾಗರ